Laxmi Shobane Lyrics in Kannada | ಲಕ್ಷ್ಮೀಶೋಭನ ಲಿರಿಕ್ಸ್‌ ಕನ್ನಡ

0
328
Laxmi Shobane Lyrics in Kannada | ಲಕ್ಷ್ಮೀಶೋಭನ ಲಿರಿಕ್ಸ್‌ ಕನ್ನಡ
Laxmi Shobane Lyrics in Kannada | ಲಕ್ಷ್ಮೀಶೋಭನ ಲಿರಿಕ್ಸ್‌ ಕನ್ನಡ

Laxmi Shobane Lyrics in Kannada ಲಕ್ಷ್ಮೀಶೋಭನ ಲಿರಿಕ್ಸ್‌ ಕನ್ನಡ song lyrics in kannada


Laxmi Shobane Lyrics in Kannada

Laxmi Shobane Lyrics in Kannada
Laxmi Shobane Lyrics in Kannada | ಲಕ್ಷ್ಮೀಶೋಭನ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಲಕ್ಷ್ಮೀಶೋಭನ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಲಕ್ಷ್ಮೀಶೋಭನ ಲಿರಿಕ್ಸ್‌ ಕನ್ನಡ

ಶೋಭಾನವೆನ್ನಿರೆ ಸುರರೊಳು ಶುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ ಶೋಭಾನೆ ||ಪಲ್ಲವಿ||

ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ
ಪಕ್ಷಿವಾಹನ್ನಗೆರಗುವೆ
ಪಕ್ಷಿವಾಹನ್ನಗೆರಗುವೆ ಅನುದಿನ
ರಕ್ಷಿಸಲಿ ನಮ್ಮ ವಧೂವರರ ||೧||

ಪಾಲಸಾಗರವನ್ನು ಲೀಲೆಯಲಿ ಕಡೆಯಲು
ಬಾಲೆ ಮಹಾಲಕ್ಷುಮಿ ಉದಿಸಿದಳು
ಬಾಲೆ ಮಹಾಲಕ್ಷುಮಿ ಉದಿಸಿದಳಾ ದೇವಿ
ಪಾಲಿಸಲಿ ನಮ್ಮ ವಧೂವರರ ||೨||

ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ
ಸುಮ್ಮನೆಯಾಗಿ ಮಲಗಿಪ್ಪ
ನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗು
ಜನ್ಮವೆಂಬುದು ಅವತಾರ ||೩||

ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ
ಅಂಬುಜವೆರಡು ಕರಯುಗದಿ
ಅಂಬುಜವೆರಡು ಕರಯುಗದಿ ಧರಿಸಿ
ಪೀತಾಂಬರವನುಟ್ಟು ಮೆರೆದಳೆ ||೪||

ಒಂದು ಕರದಿಂದ ಅಭಯವನೀವಳೆ
ಮತ್ತೊಂದು ಕೈಯಿಂದ ವರಗಳ
ಕುಂದಿಲ್ಲಲದಾನಂದಸಂದೋಹ ಉಣಿಸುವ
ಇಂದಿರೆ ನಮ್ಮ ಸಲಹಲಿ ||೫||

ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು
ನಲಿವ ಕಾಲಂದುಗೆ ಘಲಕೆನಲು
ನಳನಳಿಸುವ ಮುದ್ದುಮುಖದ ಚೆಲುವೆ ಲಕ್ಷುಮಿ
ಸಲಹಲಿ ನಮ್ಮ ವಧೂವರರ ||೬||

ರನ್ನದ ಮೊಲೆಗಟ್ಟು ಚಿನ್ನದಾಭರಣಗಳ
ಚೆನ್ನೆ ಮಹಲಕ್ಷುಮಿ ಧರಿಸಿದಳೆ
ಚೆನ್ನೆ ಮಹಲಕ್ಷುಮಿ ಧರಿಸಿದಳಾದೇವಿ
ತನ್ನ ಮನೆಯ ವಧೂ-ವರರ ಸಲಹಲಿ ||೭||

ಕುಂಭಕುಂಚದ ಮೇಲೆ ಇಂಬಿಟ್ಟ ಹಾರಗಳು
ತುಂಬಿಗುರುಳ ಮುಖಕಮಲ
ತುಂಬಿಗುರುಳ ಮುಖಕಮಲದ ಮಹಲಕ್ಷುಮಿ ಜಗ
ದಂಬೆ ವಧೂವರರ ಸಲಹಲಿ ||೮||

ಮುತ್ತಿನ ಓಲೆಯನ್ನಿಟ್ಟಳೆ ಮಹಲಕ್ಷುಮಿ
ಕಸ್ತೂರಿ ತಿಲಕ ಧರಿಸಿದಳೆ
ಕಸ್ತೂರಿ ತಿಲಕ ಧರಿಸಿದಳಾ ದೇವಿ
ಸರ್ವತ್ರ ವಧೂವರರ ಸಲಹಲಿ ||೯||

ಅಂಬುಜನಯನಗಳ ಬಿಂಬಾಧರದ ಶಶಿ-
ಬಿಂಬದಂತೆಸೆವ ಮೂಗುತಿಮಣಿಯ ಶಶಿ-
ಬಿಂಬದಂತೆಸೆವಮೂಗುತಿ ಮಣಿ ಮಹಲಕ್ಷುಮಿ
ಉಂಬುದಕೀಯಲಿ ವಧುವರರ್ಗೆ ||೧೦||

ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ
ನೆತ್ತಿಯ ಮೇಲೆ ಧರಿಸಿದೆಳೆ
ನೆತ್ತಿಯ ಮೇಲೆ ಧರಿಸಿದಳಾ ದೆವಿ ತನ್ನ
ಭಕ್ತಿಯ ಜನರ ಸಲಹಲಿ ||೧೧||

ಕುಂದ-ಮಂದರ-ಜಾಜೀ-ಕುಸುಮಗಳ ವೃಂದವ
ಚೆಂದದ ತುರುಬಿಗೆ ತುರುಬಿದಳೆ
ಕುಂದಣವರ್ಣದ ಕೋಮಲೆ ಮಹಲಕ್ಷುಮಿ ಕೃಪೆ-
ಯಿಂದ ವಧೂವರರ ಸಲಹಲಿ ||೧೨||

ಎಂದೆಂದಿಗು ಬಾಡದ ಅರವಿಂದದ ಮಾಲೆಯ
ಇಂದಿರೆ ಪೊಳೆವ ಕೊರಳಲ್ಲಿ
ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವ-
ಳಿಂದು ವಧೂವರರ ಸಲಹಲಿ ||೧೩||

ದೇವಾಂಗ ಪಟ್ಟೆಯ ಮೆಲು ಹೊದ್ದಿಕೆಯ
ಭಾಮೆ ಮಹಲಕ್ಷುಮಿ ಧರಿಸಿದಳೆ
ಭಾಮೆ ಮಹಲಕ್ಷುಮಿ ಧರಿಸಿದಳಾ ದೆವಿ ತನ್ನ
ಸೇವಕ ಜನರ ಸಲಹಲಿ ||೧೪||

ಈ ಲಕ್ಷುಮಿ ದೇವಿಯ ಕಾಲುಂಗರ ಘಲಕೆನಲು
ಲೋಲಾಕ್ಷಿ ಮೆಲ್ಲನೆ ನಡೆತಂದಳು
ಸಾಲಾಗಿ ಕುಳ್ಳಿರ್ದ ಸುರರಸಭೆಯ ಕಂಡು
ಆಲೋಚಿಸಿದಳು ಮನದಲ್ಲಿ ||೧೫||

ತನ್ನ ಮಕ್ಕಳ ಕುಂದ ತಾನೆ ಪೇಳುವದಕ್ಕೆ
ಮನ್ನದಿ ನಾಚಿ ಮಹಲಕ್ಷುಮಿ
ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ
ಉನ್ನತ ದೋಷಗಳನೆಣಿಸಿದಳು ||೧೬||

ಕೆಲವರು ತಲೆಯೂರಿ ತಪಗೈದು ಪುಣ್ಯವ
ಗಳಿಸಿದ್ದರೇನೂ ಫಲವಿಲ್ಲ
ಜ್ವಲಿಸುವ ಕೋಪದಿ ಶಾಪವ ಕೊಡುವರು
ಲಲನೆಯನಿವರು ಒಲಿಸುವರೆ ||೧೭||

ಎಲ್ಲ ಶಾಸ್ತ್ರಗಳೋದಿ ದುರ್ಲಭ ಜ್ಞಾನವ
ಕಲ್ಲಿಸಿ ಕೊಡುವ ಗುರುಗಳು
ಬಲ್ಲಿದ ಧನಕ್ಕೆ ಮರುಳಾಗಿವರಿಬ್ಬರು
ಸಲ್ಲದ ಪುರೋಹಿತಕ್ಕೊಳಗಾದರು ||೧೮||

ಕಾಮನಿರ್ಜಿತನೊಬ್ಬ ಕಾಮಿನಿಗೆ ಸೋತೊಬ್ಬ
ಭಾಮಿನಿಯ ಹಿಂದೆ ಹಾರಿದವ
ಕಾಮಾಂಧನಾಗಿ ಮುನಿಯ ಕಾಮಿನಿಗೈದನೊಬ್ಬ
ಕಾಮದಿ ಗುರುತಲ್ಪಗಾಮಿಯೊಬ್ಬ ||೧೯||

ನಶ್ವರೈಶ್ವರ್ಯವ ಬಯಸುವನೊಬ್ಬ ಪರ-
ರಾಶ್ರಯಿಸಿ ಬಾಳುವ ಈಶ್ವರನೊಬ್ಬ
ಹಾಸ್ಯವ ಮಾಡಿ ಹಲ್ಲುದುರಿಸಿಕೊಂಡವನೊಬ್ಬ
ಅದೃಶ್ಯಾಂಘ್ರಿಯೊಬ್ಬ ಒಕ್ಕಣನೊಬ್ಬ ||೨೦||

ಮಾವನ ಕೊಂದೊಬ್ಬ ಮರುಳಾಗಿಹನು
ಗಾಢ ಹಾರ್ವನ ಕೊಂದೊಬ್ಬ ಬಳಲಿದ
ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ
ಶಿವನಿಂದೊಬ್ಬ ಬಯಲಾದ ||೨೧||

ಧರ್ಮವುಂಟೊಬ್ಬನಲಿ ಹೆಮ್ಮೆಯ ಹೆಸರಿಗೆ
ಅಮ್ಮಮ್ಮ ತಕ್ಕ ಗುಣವಿಲ್ಲ
ಕ್ಷಮ್ಮೆಯ ಬಿಟ್ಟೊಬ್ಬ ನರಕದಲ್ಲಿ ಜೀವರ
ಮರ್ಮವ ಮೆಟ್ಟಿ ಕೊಲಿಸುವ ||೨೨||

ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ
ಬಲ್ಲಿದಗಂಜಿ ಬರಿಗೈದ
ದುರ್ಲಭ ಮುಕ್ತಿಗೆ ದೂರವೆಂದೆನಿಸುವ ಪಾ-
ತಾಳಕ್ಕೆ ಇಳಿದ ಗಡ ||೨೩||

ಎಲ್ಲರಾಯುಷ್ಯವ ಶಿಂಶುಮಾರದೇವ
ಸಲ್ಲೀಲೆಯಿಂದಲಿ ತೊಲಗಿಸುವ
ಒಲ್ಲೆ ನಾನಿವರ ನಿತ್ಯಮುತ್ತೈದೆಯೆಂದು
ಬಲ್ಲವರೆನ್ನ ಭಜಿಸುವರು ||೨೪||

ಪ್ರಕೃತಿಯ ಗುಣದಿಂದ ಕಟ್ಟುವಡೆದು ನಾನಾ
ವಿಕೃತಿಗೊಳಾಗಿ ಭವದಲ್ಲಿ
ಸುಖದುಃಖವೆಂಬ ಬೊಮ್ಮಾದಿ ಜೀವರು
ದುಃಖಕ್ಕೆ ದೂರೆನಿಪ ಎನಗೆಣೆಯ ||೨೫||

ಒಬ್ಬನಾವನ ಮಗ ಮತ್ತೊಬ್ಬನಾವನ ಮೊಮ್ಮಗ
ಒಬ್ಬನಾವನಿಗೆ ಶಯನಾಹ
ಒಬ್ಬನಾವನ ಪೊರುವ ಮತ್ತಿಬ್ಬರಾವನಿಗಂಜಿ
ಅಬ್ಬರದಲಾವಾಗ ಸುಳಿವರು ||೨೬||

ಒಬ್ಬನಾವನ ನಾಮಕಂಜಿ ಬೆಚ್ಚುವ ಗಾಢ
ಸರ್ವರಿಗಾವ ಅಮೃತವ
ಸರ್ವರಿಗಾವ ಅಮೃತವನುಣಿಸುವ ಅವ-
ನೊಬ್ಬನೆ ನಿರನಿಷ್ಟ ನಿರವದ್ಯ ||೨೭||

ನಿರನಿಷ್ಟ ನಿರವದ್ಯ ಎಂಬ ಶ್ರುತ್ಯರ್ಥವ
ಒರೆದು ನೋಡಲು ನರಹರಿಗೆ
ನರಕಯಾತನೆ ಸಲ್ಲ ದುರಿತಾತಿದೂರನಿಗೆ
ಮರುಳ ಮನಬಂದಂತೆ ನುಡಿಯದಿರು ||೨೮||

ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದಣಿಸಿವೆ ಬಹು ದೋಷ
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ||೨೯||

ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು
ತೀವಿದ್ದ ಹರಿಗೆ ದುರಿತವ
ಭಾವಜ್ನರೆಂಬರೆ ಆಲದೆಲೆಯ ಮೆಲೆ
ಶಿವನ ಲಿಂಗವ ನಿಲಿಸುವರೆ ||೩೦||

ಹಸಿ-ತೃಷೆ-ಜರೆ-ಮರಣ-ರೋಗ-ರುಜೆಗಳೆಂಬ
ಅಸುರ-ಪಿಶಾಚಿಗಳೆಂಬ ಭಯವೆಂಬ
ವ್ಯಸನ ಬರಬಾರದು ಎಂಬ ನಾರಾಯಣಗೆ
ಪಶು ಮೊದಲಾಗಿ ನೆನೆಯದು ||೩೧||

ತಾ ದುಃಖಿಯಾದರೆ ಸುರರಾರ್ತಿಯ ಕಳೆದು
ಮೋದವೀವುದಕ್ಕೆ ಧರೆಗಾಗಿ
ಮಾಧವ ಬಾಹನೆ ಕೆಸರೊಳು ಮುಳುಗಿದವ ಪರರ
ಭಾಧಿಪ ಕೆಸರ ಬಿಡಿಸುವನೆ ||೩೨||

ಬೊಮ್ಮನಾಲಯದಲ್ಲಿ ಇದ್ದವಗೆ ಲಯವುಂಟೆ
ಜನ್ಮಲಯವಿದವನಿಗೆ
ಅಮ್ಮಿಯನುಣಿಸಿದ್ದ ಯಶೋದೆಯಾಗಿದ್ದಳೆ
ಅಮ್ಮ ಇವಗೆ ಹಸಿ-ತೃಷೆಯುಂಟೆ ||೩೩||

ಆಗ ಭಕ್ಷ್ಯಭೋಜ್ಯವಿತ್ತು ಪೂಜಿಸುವ
ಯೋಗಿಗೆ ಉಂಟೆ ಧನಧಾನ್ಯ
ಆಗ ದೊರಕೊಂಬುದೆ ಪಾಕ ಮಾಡುವ ವಹ್ನಿ
ಮತ್ತಾಗಲೆಲ್ಲಿಹುದು ವಿಚಾರಿಸಿರೊ ||೩೪||

ರೋಗವನೀವ ವಾತ ಪಿತ್ತ ಶ್ಲೇಷ್ಮ
ಆಗ ಕೂಡುವುದೆ ರಮೆಯೊಡನೆ
ಭೋಗಿಸುವವಗೆ ದುರಿತವ ನೆನೆವರೆ
ಈ ಗುಣನಿಧಿಗೆ ಎಣೆಯುಂಟೆ ||೩೫||

ರಮ್ಮೆದೇವಿಯರನಪ್ಪಿಕೊಂಡಿಪ್ಪುದು
ರಮ್ಮೆಯರಸಗೆ ರತಿ ಕಾಣಿರೊ
ಅಮ್ಮೋಘವೀರ್ಯವು ಚಲಿಸಿದರೆ ಪ್ರಳಯದಲಿ
ಕುಮ್ಮಾರರ್ ಯಾಕೆ ಜನಿಸರು ||೩೬||

ಏಕತ್ರ ನಿರ್ಣೀತ ಶಾಸ್ತ್ರಾರ್ಥ ಪರತ್ರಾಪಿ
ಬೇಕೆಂಬ ನ್ಯಾಯವ ತಿಳಿದುಕೊ
ಶ್ರೀಕೃಷ್ಣನೊಬ್ಬನೆ ಸರ್ವ ದೋಷಕ್ಕೆ ಸಿ
ಲುಕನೆಂಬುದು ಸಲಹಲಿಕೆ ||೩೭||

ಎಲ್ಲ ಜಗವ ನುಂಗಿ ದಕ್ಕಿಸಿಕೊಂಡವಗೆ
ಸಲ್ಲದು ರೋಗ ರುಜಿನವು
ಬಲ್ಲ ವೈದ್ಯರ ಕೆಳಿ ಅಜೀರ್ತಿಮೂಲವೆಲ್ಲ
ಸಲ್ಲದು ರೋಗ ರುಜಿನವು ||೩೮||

ಇಂಥಾ ಮೂರುತಿಯ ಒಳಗೊಂಬ ನರಕ ಬಹು
ಭ್ರಾಂತ ನೀನೆಲ್ಲಿಂದ ತೋರಿಸುವೆಲೊ
ಸಂತೆಯ ಮರುಳ ಹೋಗೆಲೊ ನಿನ್ನ ಮಾತ
ಸಂತರು ಕೇಳಿ ಸೊಗಸರು ||೩೯||

ಶ್ರೀನಾರಾಯಣರ ಜನನೀ ಜನಕರ
ನಾನೆಂಬ ವಾದೀ ನುಡಿಯಲೊ
ಜಾಣರಿಂದರಿಯ ಮೂಲ ರೂಪವ ತೊರಿ
ಶ್ರೀ ನರಸಿಂಹನ ಅವತಾರ ||೪೦||

ಅಂಬುಧಿಯ ಉದಕದಲಿ ಒಡೆದು ಮೂಡಿದ ಕೂರ್ಮ
ನೆಂಬ ಶ್ರೀ ಹರಿಯ ಪಿತನಾರು?
ಎಂಬ ಶ್ರೀ ಹರಿಯ ಪಿತನಾರು ಅದರಿಂದ ಸ್ವಾ
ಯಂಭುಗಳೆಲ್ಲ ಅವತಾರ ||೪೧||

ದೇವಕಿಯ ಗರ್ಭದಲಿ ದೇವನವತರಿಸಿದ
ಭಾವವನ್ನು ಬಲ್ಲ ವಿವೇಕಿಗಳು
ಈ ವಸುಧೆಯೊಳಗೆ ಕೃಷ್ಣಗೆ ಜನ್ಮವ-
ಆವ ಪರಿಯಲ್ಲಿ ನುಡಿಯುವಿಯೊ ||೪೨||

ಆಕಳಿಸುವಾಗ ಯಶೋದಾದೇವಿಗ
ದೇವ ತನ್ನೊಳಗೆ ಹುದುಗಿದ್ದ
ತ್ರಿಭುವನವೆಲ್ಲವ ತೋರಿದುದಿಲ್ಲವೆ
ಆ ವಿಷ್ಣು ಗರ್ಭದೊಳಡಗುವನೆ ||೪೩||

ಆನೆಯ ಮಾನದಲ್ಲಿ ಅಡಗಿಸಿದವರುಂಟೆ
ಅನೇಕ ಕೋಟಿ ಅಜಾಂಡವ
ಅಣುರೇಣು ಕೂಪದಲಿ ಆಳ್ದ ಶ್ರೀ ಹರಿಯ
ಜನನಿ ಜಠರವು ಒಳಗೊಂಬುದೆ ||೪೪||

ಅದರಿಂದ ಕೃಷ್ಣನಿಗೆ ಜನ್ಮವೆಂಬುದು ಸಲ್ಲ
ಮದನನಿವನ ಕುಮಾರನು
ಕದನದಿ ಕಣೆಗಳ ಇವನೆದೆಗೆಸೆವನೆ
ಸುದತೇರಿವನಿಂತು ನಿಂತು ಸಿಲುಕುವನೆ ||೪೫||

ಅದರಿಂದ ಕೃಷ್ಣನಿಗೆ ಪರನಾರೀ ಸಂಗವ ಕೋ-
ವಿದರಾದ ಬುಧರು ನುಡಿವರೆ
ಸದರವೆ ಈ ಮಾತು ಸರ್ವ ವೇದಂಗಳು
ಮುದದಿಂದ ತಾವು ಸ್ತುತಿಸುವವು ||೪೬||

ಎಂದ ಭಾಗವತದ ಚೆಂದದ ಮಾತನು
ಮಂದ ಮಾನವ ಮನಸಿಗೆ
ತಂದುಕೊ ಜಗಕ್ಕೆ ಕೈವಲ್ಯವೀವ ಮು-
ಕುಂದಗೆ ಕುಂದು ಕೊರತೆ ಸಲ್ಲದು ||೪೭||

ಹತ್ತು ವರ್ಷದ ಕೆಳಗೆ ಮಕ್ಕಳಾಟಿಕೆಯಲ್ಲಿ
ಚಿತ್ತ ಸ್ತ್ರೀಯರಿಗೆ ಎರಗುವದೆ
ಅರ್ತಿಯಿಂದರ್ಚಿಸಿದ ಗೋಕುಲದ ಕನ್ಯೆಯರ
ಸತ್ಯಸಂಕಲ್ಪ ಬೆರಸಿದ್ದ ||೪೮||

ಹತ್ತು ಮತ್ತಾರು ಸಾಸಿರ ಸ್ತ್ರೀಯರಲ್ಲಿ
ಹತ್ತು ಹತ್ತೆನಿಪ ಕ್ರಮದಿಂದ
ಪುತ್ರರ ವೀರ್ಯದಲಿ ಸೃಷ್ಟಿಸಿದವರುಂಟೆ
ಅರ್ತಿಯ ಸೃಷ್ಟಿ ಹರಿಗಿದು ||೪೯||

ರೋಮ-ರೋಮಕೂಪ ಕೋಟಿವೃಕಂಗಳ
ನಿರ್ಮಿಸಿ ಗೋಪಾಲರ ತೆರಳಿಸಿದ
ನಮ್ಮ ಶ್ರೀಕೃಷ್ಣನು ಮಕ್ಕಳ ಸೃಜಿಸುವ
ಮಹಿಮೆ ಬಲ್ಲವರಿಗೆ ಸಲಹಲಿಕೆ ||೫೦||

ಮಣ್ಣನೇಕೆ ಮೆದ್ದೆಯೆಂಬ ಯಶೋದೆಗೆ
ಸಣ್ಣ ಬಾಯೊಳಗೆ ಜಗಂಗಳ
ಕಣ್ಣಾರೆ ತೋರಿದ ನಮ್ಮ ಶ್ರೀಕೃಷ್ಣನ
ಘನತೆ ಬಲ್ಲವರಿಗೆ ಸಲಹಲಿಕೆ ||೫೧||

ನಾರದ ಸನಕಾದಿಮೊದಲಾದ ಯೋಗಿಗಳು
ನಾರಿಯರಿಗೆ ಮರುಳಾಹರೆ
ಓರಂತೆ ಶ್ರೀಕೃಷ್ಣನಡಿಗೆರಗುವರೆ
ಆರಾಧಿಸುತ್ತ ಭಜಿಸುವರೆ ||೫೨||

ಅಂಬುಜಸಂಭವ ತ್ರಿಯಂಬಕ ಮೊದಲಾದ
ನಂಬಿದವರಿಗೆ ವರವಿತ್ತ
ಸಂಭ್ರಮದ ಸುರರು ಎಳ್ಳಷ್ಟು ಕೋಪಕ್ಕೆ
ಇಂಬಿದ್ದರಿವನ ಭಜಿಸುವರೆ ||೫೩||

ಅವನಂಗುಷ್ಠವ ತೊಳೆದ ಗಂಗಾದೇವಿ
ಪಾವನಳೆನಿಸಿ ಮೆರೆಯಳೆ
ಜೀವನ ಸೇರುವ ಪಾಪವ ಕಳೆವಳು
ಈ ವಾಸುದೇವಗೆ ಎಣೆಯುಂಟೆ ||೫೪||

ಕಿಲ್ಬಿಷವಿದ್ದರೆ ಅಗ್ರ ಪೂಜೆಯನು
ಸರ್ವರಾಯರ ಸಭೆಯೊಳಗೆ
ಉಬ್ಬಿದ ಮನದಿಂದ ಧರ್ಮಜ ಮಾಡುವನೆಲೆ
ಕೊಬ್ಬದಿರೆಲೊ ಪರವಾದಿ ||೫೫||

ಸಾವಿಲ್ಲದ ಹರಿಗೆ ನರಕಯಾತನೆ ಸಲ್ಲ
ಜೀವಂತರಿಗೆ ನರಕದಲ್ಲಿ
ನೋವನೀವನು ನಿಮ್ಮ ಯಮದೇವನು
ನೋವ ನೀ ಹರಿಯ ಗುಣವರಿಯ ||೫೬||

ಶೋಭನವೆನ್ನಿರೆ ಸುರರೊಳು ಸುಭಗನಿಗೆ
ಶೋಭನವೆನ್ನೀ ಸುಗುಣನಿಗೆ ।
ಶೋಭನವೆನ್ನಿರೆ ತ್ರಿವಿಕ್ರಮರಾಯನಿಗೆ
ಶೋಭನವೆನ್ನೀ ಸುರಪ್ರಿಯಗೆ ॥ ಶೋಭಾನೆ ॥ ॥ಪಲ್ಲವಿ॥

ನರಕವಾಳುವ ಯಮಧರ್ಮರಾಯ
ತನ್ನ ನರಜನ್ಮದೊಳಗೆ ಪೊರಳಿಸಿ
ಮರಳೀ ತನ್ನರಕದಲಿ ಪೊರಳಿಸಿ ಕೊಲುವನು
ಕುರು ನಿನ್ನ ಕುಹಕ ಕೊಳದಲ್ಲ ||೫೭||

ಬೊಮ್ಮನ ನೂರು ವರ್ಷ ಪರಿಯಂತ ಪ್ರಳಯದಲಿ
ಸುಮ್ಮನೆಯಾಗಿ ಮಲಗಿಪ್ಪ
ನಮ್ಮ ನಾರಾಯಣಗೆ ಹಸಿ-ತೃಷೆ -ಜರ-ಮರಣ-ದು-
ಷ್ಕರ್ಮ-ದುಃಖಂಗಳು ತೊಡಸುವರೆ ||೫೮||

ರಕ್ಕಸರಸ್ತ್ರಗಳಿಂದ ಗಾಯವಡೆಯದ
ಅಕ್ಷಯಕಾಯದ ಶ್ರೀಕೃಷ್ಣ
ತುಚ್ಛ ಯಮಭಟರ ಶಸ್ತ್ರಕಳಕುವನಲ್ಲ
ಹುಚ್ಚ ನೀ ಹರಿಯ ಗುಣವರಿಯ ||೫೯||

ಕಿಚ್ಚ ನುಂಗಿದನು ನಮ್ಮ ಶ್ರೀಕೃಷ್ಣನು
ತುಚ್ಛ ನರಕದೊಳು ಅನಲನಿಗೆ
ಬೆಚ್ಚುವನಲ್ಲ ಅದರಿಂದವಗೆ ನರಕ
ಮೆಚ್ಚುವರಲ್ಲ ಬುಧರೆಲ್ಲ ||೬೦||

ಮನೆಯಲ್ಲಿ ಕ್ಷಮೆಯ ತಾಳ್ದ ವೀರಭಟ
ರಣರಂಗದಲಿ ಕ್ಷಮಿಸುವನೆ
ಅಣುವಾಗಿ ನಮ್ಮ ಹಿತಕೆ ಮನದೊಳಗಿನ ಕೃಷ್ಣ
ಮುನಿವ ಕಾಲಕ್ಕೆ ಮಹತ್ತಾಹ ||೬೧||

ತಾಯ ಪೊಟ್ಟೆಯಿಂದ ಮೂಲರೂಪವ ತೋರಿ
ಆಯುಧ ಸಹಿತ ಪೊರವಂಟ
ನ್ಯಾಯಕೋವಿದರು ಪುಟ್ಟಿದನೆಂಬರೆ
ಬಾಯಿಗೆ ಬಂದಂತೆ ಬೊಗಳದಿರು ||೬೨||

ಉಟ್ಟ ಪೀತಾಂಬರ ತೊಟ್ಟ ಭೂಷಣಂಗಳು
ಇಟ್ಟ ನವರತ್ನದ ಕಿರೀಟವು
ಮೆಟ್ಟಿದ ಕುರುಹು ಎದೆಯಲ್ಲಿ ತೊರಿದ ಶ್ರೀ-
ವಿಠ್ಠಲ ಪುಟ್ಟಿದನೆನಬಹುದೆ ||೬೩||

ವೃಷಭಹಂಸಮೂಷಕವಾಹನವೇರಿ ಮಾ-
ನಿಸರಂತೆ ಸುಳಿವ ಸುರರೆಲ್ಲ
ಎಸೆವ ದೇವೇಶಾನರ ಸಾಹಸಕ್ಕೆ ಮಡಿದರು
ಕುಸುಮನಾಭನಿಗೆ ಸರಿಯುಂಟೆ ||೬೪||

ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದೆಣಿಸಿವೆ ಬಹು ದೋಷ
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ||೬೫||

ಇಂತು ಚಿಂತಿಸಿ ರಮೆ ಸಂತ ರಾಮನ ಪದವ
ಸಂತೋಷ ಮನದಿ ನೆನೆವುತ್ತ
ಸಂತೋಷ ಮನದಿ ನೆನೆವುತ್ತ ತನ್ನ ಶ್ರೀ
ಕಾಂತನಿದ್ದೆಡೆಗೆ ನಡೆದಳು ||೬೬||

ಕಂದರ್ಪ ಕೋಟಿಗಳ ಗೆಲುವ ಸೌಂದರ್ಯದ
ಚೆಂದವಾಗಿದ್ದ ಚೆಲುವನ
ಇಂದಿರೆ ಕಂಡು ಇವನೆ ತನಗೆ ಪತಿ-
ಯೆಂದವನ ಬಳಿಗೆ ನಡೆದಳು ||೬೭||

ಈ ತೆರದ ಸುರರ ಸುತ್ತ ನೋಡುತ ಲಕ್ಷ್ಮೀ
ಚಿತ್ತವ ಕೊಡದೆ ನಸುನಗುತ
ಚಿತ್ತವಕೊಡದೆ ನಸುನಗುತ ಬಂದು ಪುರು-
ಷೋತ್ತಮನ ಕಂಡು ನಮಿಸಿದಳು ||೬೮||

ನಾನಾಕುಸುಮಗಳಿಂದ ಮಾಡಿದ ಮಾಲೆಯ
ಶ್ರೀ ನಾರಿ ತನ್ನ ಕರದಲ್ಲಿ
ಪೀನಕಂಧರದ ತ್ರಿವಿಕ್ರಮರಾಯನ
ಕೊರಳಿನ ಮೇಲಿಟ್ಟು ನಮಿಸಿದಳು ||೬೯||

ಉಟ್ಟಪೊಂಬಟ್ಟೆಯ ತೊಟ್ಟಾಂಭರಣಂಗಳು
ಇಟ್ಟ ನವರತ್ನದ ಮುಕುಟವು
ದುಷ್ಟಮರ್ದನನೆಂಬ ಕಡೆಯ ಪಂಡೆಗಳು
ವಟ್ಟಿದ್ದ ಹರಿಗೆ ವಧುವಾದಳು ||೭೦||

ಕೊಂಬು ಚೆಂಗಹಳೆಗಳು ತಾಳಮದ್ದಳೆಗಳು
ತಂಬಟೆ ಭೇರಿ ಪಟಹಗಳು
ಭೊಂ ಭೊಂ ಎಂಬ ಶಂಖ ಡೊಳ್ಳು ಮೌರಿಗಳು
ಅಂಬುಧಿಯ ಮನೆಯಲ್ಲೆಸೆದವು ||೭೧||

ಅರ್ಘ್ಯಪಾದ್ಯಾಚಮನ ಮೊದಲಾದ ಷೋಡಶಾ-
ನರ್ಘ್ಯ ಪೂಜೆಯಿತ್ತನಳಿಯಗೆ
ಒಗ್ಗಿದ ಮನದಿಂದ ಧಾರೆಯೆರೆದನೆ ಸಿಂಧು
ಸದ್ಗತಿಯಿತ್ತು ಸಲಹೆಂದ ||೭೨||

ವೇದೋಕ್ತ ಮಂತ್ರ ಪೇಳಿ ವಸಿಷ್ಠ ನಾರದ ಮೊದ-
ಲಾದ ಮುನೀಂದ್ರರು ಮುದದಿಂದ
ವಧೂವರರ ಮೆಲೆ ಶೋಭನದಕ್ಷತೆಯನು
ಮೊದವೀವುತ್ತ ತಳೆದರು ||೭೩||

ಸಂಭ್ರಮದಿಂದಂಬರದಿ ದುಂದುಭಿ ಮೊಳಗಲು
ತುಂಬುರು ನಾರದರು ತುತಿಸುತ್ತ
ತುಂಬುರು ನಾರದರು ತುತಿಸುತ್ತ ಪಾಡಿದರು ಪೀ-
ತಾಂಬರಧರನ ಮಹಿಮೆಯ ||೭೪||

ದೇವನಾರಿಯರೆಲ್ಲ ಬಂದೊದಗಿ ಪಾಠಕರು
ಓವಿ ಪಾಡುತ್ತ ಕುಣಿದರು
ದೇವತರುವಿನ ಹೂವಿನ ಮಳೆಗಳ
ಶ್ರೀವರನ ಮೆಲೆ ಕರೆದರು ||೭೫||

ಮುತ್ತು-ರತ್ನಗಳಿಂದ ಕೆತ್ತಿಸಿದ ಹಸೆಯ ನವ-
ರತ್ನ ಮಂಟಪದಿ ಪಸರಿಸಿ
ರತ್ನಮಂಟಪದಿ ಪಸರಿಸಿ ಕೃಷ್ಣನ
ಮುತ್ತೈದೆಯರೆಲ್ಲ ಕರೆದರು ||೭೬||

ಶೇಷಶಯನನೆ ಬಾ ದೋಷದೂರನೆ ಬಾ
ಭಾಸುರಕಾಯ ಹರಿಯೆ ಬಾ
ಭಾಸುರಕಾಯ ಹರಿಯೆ ಬಾ ಶ್ರೀಕೃಷ್ಣ ವಿ-
ಲಾಸದಿಂದೆಮ್ಮ ಹಸೆಗೆ ಬಾ ||೭೭||

ಕಂಜಲೋಚನನೆ ಬಾ ಮಂಜುಳಮೂರ್ತಿ ಬಾ
ಕುಂಜರವರದಾಯಕನೆ ಬಾ
ಕುಂಜರವರದಾಯಕನೆ ಬಾ ಶ್ರೀಕೃಷ್ಣ ನಿ-
ರಂಜನ ನಮ್ಮ ಹಸೆಗೆ ಬಾ ||೭೮||

ಆದಿಕಾಲದಲಿ ಆಲದೆಲೆಯ ಮೇಲೆ
ಶ್ರೀದೇವಿಯರೊಡನೆ ಪವಡಿಸಿದ
ಶ್ರೀದೇವಿಯರೊಡನೆ ಪವಡಿಸಿದ ಶ್ರೀಕೃಷ್ಣ
ಮೋದದಿಂದೆಮ್ಮ ಹಸೆಗೆ ಬಾ ||೭೯||

ಆದಿಕಾರಣನಾಗಿ ಆಗ ಮಲಗಿದ್ದು
ಮೋದ ಜೀವರ ತನ್ನ ಉದರದಲಿ
ಮೋದ ಜೀವರ ತನ್ನುದರದಲಿ ಇಂಬಿತ್ತ ಅ-
ನಾದಿ ಮೂರುತಿಯೆ ಹಸೆಗೆ ಬಾ ||೮೦||

ಚಿನ್ಮಯವೆನಿಪ ನಿಮ್ಮ ಮನೆಗಳಲ್ಲಿ ಜ್ಯೋ
ತಿರ್ಮಯವಾದ ಪದ್ಮದಲ್ಲಿ
ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ
ನಮ್ಮ ಮನೆಯ ಹಸೆಗೆ ಬಾ ||೮೧||

ನಾನಾವತಾರದಲಿ ನಂಬಿದ ಸುರರಿಗೆ
ಆನಂದವೀವ ಕರುಣಿ ಬಾ
ಆನಂದವೀವ ಕರುಣಿ ಬಾ ಶ್ರೀಕೃಷ್ಣ
ಶ್ರೀನಾರಿಯೊಡನೆ ಹಸೆಗೆಳು ||೮೨||

ಬೊಮ್ಮನ ಮನೆಯಲ್ಲಿ ರನ್ನದಪೀಠದಿ ಕುಳಿತು
ಒಮ್ಮನದಿ ನೇಹವ ಮಾಡುವ
ನಿರ್ಮಲ ಪೂಜೆಯ ಕೈಗೊಂಬ ಶ್ರೀಕೃಷ್ಣ ಪ-
ರಮ್ಮ ಮೂರುತಿಯೆ ಹಸೆಗೆ ಬಾ ||೮೩||

ಮುಖ್ಯಪ್ರಾಣನ ಮನೆಯಲ್ಲಿ ಭಾರತಿಯಾಗಲಿ-
ಕ್ಕೆ ಬಡಿಸಿದ ರಸಾಯನವ
ಸಕ್ಕರೆಗೂಡಿದ ಪಾಯಸ ಸವಿಯುವ
ರಕ್ಕಸವೈರಿಯೆ ಹಸೆಗೆ ಬಾ ||೮೪||

ರುದ್ರನ ಮನೆಯಲ್ಲಿ ರುದ್ರಾಣಿದೇವಿಯರು
ಭದ್ರಮಂಟಪದಿ ಕುಳ್ಳಿರಿಸಿ
ಸ್ವಾದ್ವನ್ನಗಳನು ಬಡಿಸಲು ಕೈಗೊಂಡ
ಮುದ್ದು ನರಸಿಂಹ ಹಸೆಗೆ ಬಾ ||೮೫||

ಗರುಡನ ಮೇಲೇರಿ ಗಗನಮಾರ್ಗದಲ್ಲಿ
ತರತರದಿ ಸ್ತುತಿಪ ಸುರಸ್ತ್ರೀಯರ
ಮೆರೆವ ಗಂಧರ್ವರ ಗಾನವ ಸವಿಯುವ
ನರಹರಿ ನಮ್ಮ ಹಸೆಗೆ ಬಾ ||೮೬|

ನಿಮ್ಮಣ್ಣನ ಮನೆಯ ಸುಧರ್ಮ ಸಭೆಯಲ್ಲಿ
ಉಮ್ಮೆಯರಸ ನಮಿಸಿದ
ಧರ್ಮರಕ್ಷಕನೆನಿಪ ಕೃಷ್ಣ ಕೃಪೆಯಿಂದ ಪ-
ರಮ್ಮ ಮೂರುತಿಯೆ ಹಸೆಗೆ ಬಾ ||೮೭||

ಇಂದ್ರನ ಮನೆಘೋಗಿ ಅದಿತಿಗೆ ಕುಂಡಲವಿತ್ತು
ಅಂದದ ಪೂಜೆಯ ಕೈಗೊಂಡು
ಅಂದದ ಪೂಜೆಯ ಕೈಗೊಂಡು ಸುರತರುವ
ಇಂದಿರೆಗಿತ್ತ ಹರಿಯೆ ಬಾ ||೮೮||

ನಿಮ್ಮ ನೆನೆವ ಮುನಿಹೃದಯದಲಿ ನೆಲೆಸಿದ
ಧರ್ಮರಕ್ಷಕನೆನಿಸುವ
ಸಮ್ಮತವಾಗಿದ್ದ ಪೂಜೆಯ ಕೈಗೊಂಡ ನಿ-
ಸ್ಸೀಮ ಮಹಿಮ ಹಸೆಗೆ ಬಾ ||೮೯||

ಮುತ್ತಿನ ಸತ್ತಿಗೆಯ ನವರತ್ನದ ಚಾಮರ
ಸುತ್ತನಲಿವ ಸುರಸ್ತ್ರೀಯರ
ನೃತ್ಯವ ನೋಡುತ ಚಿತ್ರ ವಾದ್ಯಂಗಳ ಸಂ
ಪತ್ತಿನ ಹರಿಯೆ ಹಸೆಗೆ ಬಾ ||೯೦||

ಎನಲು ನಗುತ ಬಂದು ಹಸೆಯ ಮೇಲೆ
ವನಿತೆ ಲಕ್ಷ್ಮಿಯೊಡಗೂಡಿ
ಅನಂತ ವೈಭವದಿ ಕುಳಿತ ಕೃಷ್ಣನ ನಾಲ್ಕು
ದಿನದುತ್ಸವವ ನಡೆಸಿದರು ||೯೧||

ಅತ್ತೆರೆನಿಪ ಗಂಗೆ ಯಮುನೆ ಸರಸ್ವತಿ ಭಾ-
ರತಿ ಮೊದಲಾದ ಸುರಸ್ತ್ರೀಯರು
ಮುತ್ತಿನಾಕ್ಷತೆಯನು ಶೋಭಾನವೆನುತಲಿ ತಮ್ಮ
ಅರ್ತಿಯಳಿಯಗೆ ತಳಿದರು ||೯೨||

ರತ್ನದಾರತಿಗೆ ಸುತ್ತ ಮುತ್ತನೆ ತುಂಬಿ
ಮುತ್ತೈದೆಯರೆಲ್ಲ ಧವಳದ
ಮುತ್ತೆದೆರೆಲ್ಲ ಧವಳದ ಪದವ ಪಾ-
ಡುತ್ತಲೆತ್ತಿದರೆ ಸಿರಿವರಗೆ ||೯೩||

ಬೊಮ್ಮ ತನ್ನರಸಿ ಕೂಡೆ ಬಂದರೆಗಿದ
ಉಮ್ಮೆಯರಸ ನಮಿಸಿದ
ಅಮ್ಮರರೆಲ್ಲರು ಬಗೆಬಗೆ ಉಡುಗೊರೆಗಳ
ರಮ್ಮೆಯರಸಗೆ ಸಲಿಸಿದರು ||೯೪||

ಸತ್ಯಲೋಕದ ಬೊಮ್ಮ ಕೌಸ್ತುಭರತ್ನವನಿತ್ತ
ಮುಕ್ತಾಸುರರು ಮುದದಿಂದ
ಮುತ್ತಿನ ಕಂಠೀಸರವ ಮುಖ್ಯಪ್ರಾಣನಿತ್ತ
ಮಸ್ತಕದ ಮಣಿಯ ಶಿವನಿತ್ತ ||೯೫||

ತನ್ನರಸಿ ಕೂಡೆ ಸವಿನುಡಿ ನುಡಿವಾಗ
ವದನದಲ್ಲಿದ್ದಗ್ನಿ ಕೆಡದಂತೆ
ವಹ್ನಿ ಪ್ರತಿಷ್ಠೆಯ ಮಾಡಿ ಅವನೊಳಗಿದ್ದ
ತನ್ನಾಹುತಿ ದಿಬ್ಬಣ ಸುರರಿಗೆ ||೯೬||

ಕೊಬ್ಬಿದ ಖಳರೋಡಿಸಿ ಅಮೃತಾನ್ನ ಊಟಕ್ಕೆ
ಉಬ್ಬಿದ ಹರುಷದಿ ಉಣಿಸಲು
ಉಬ್ಬಿದ ಹುರುಷದಿ ಉಣಿಸಬೇಕೆಂದು ಸಿಂಧು
ಸರ್ವರಿಗಡಿಗೆಯ ಮಾಡಿಸಿದ ||೯೭||

ಮಾವನ ಮನೆಯಲ್ಲಿ ದೇವರಿಗೌತಣವ
ದಾನವರು ಕೆಡಿಸದೆ ಬಿಡರೆಂದು
ದಾನವರು ಕೆಡಿಸದೆ ಬಿಡರೆಂದು ಶ್ರೀಕೃಷ್ಣ
ದೇವಸ್ತ್ರೀವೇಷವ ಧರಿಸಿದ ||೯೮||

ತನ್ನ ಸೌಂದರ್ಯದಿಂದುನ್ನತಮಯವಾದ
ಲಾವಣ್ಯದಿಂದ ಮೆರೆವ ನಿಜಪತಿಯ
ಹೆಣ್ಣು ರೂಪವ ಕಂಡು ಕನ್ಯೆ ಮಹಲಕ್ಷುಮಿ ಇವ-
ಗನ್ಯರೇಕೆಂದು ಬೆರಗಾದಳು ||೯೯||

ಲಾವಣ್ಯಮಯವಾದ ಹರಿಯ ಸ್ತ್ರೀವೇಷಕ್ಕೆ
ಭಾವಕಿಯರೆಲ್ಲ ಮರುಳಾಗೆ
ಮಾವರ ಸುಧೆಯ ಕ್ರಮದಿಂದ ಬಡಿಸಿ ತನ್ನ
ಸೇವಕ ಸುರರಿಗುಣಿಸಿದ ||೧೦೦||

ನಾಗನ ಮೆಲೆ ತಾ ಮಲಗಿದ್ದಾಗ
ಆಗಲೆ ಜಗವ ಜತನದಿ
ಆಗಲೆ ಜಗವ ಜತನದಿ ಧರಿಸೆಂದು
ನಾಗಬಲಿಯ ನಡೆಸಿದ ||೧೦೧||

ಕ್ಷುಧೆಯ ಕಳೆವ ನವರತ್ನದ ಮಾಲೆಯ
ಮುದದಿಂದ ವಾರಿಧಿ ವಿಧಿಗಿತ್ತ
ಚದುರ ಹಾರವ ವಾಯುದೇವರಿಗಿತ್ತ
ವಿಧುವಿನ ಕಲೆಯ ಶಿವಗಿತ್ತ ||೧೦೨||

ಶಕ್ರ ಮೊದಲಾದ ದಿಕ್ಪಾಲಕರಿಗೆ
ಸೊಕ್ಕಿದ ಚೌದಂತ ಗಜಂಗಳ
ಉಕ್ಕಿದ ಮನದಿಂದ ಕೊಟ್ಟ ವರುಣ ಮದು-
ಮಕ್ಕಳಾಯುಷ್ಯವ ಬೆಳೆಸೆಂದ ||೧೦೩||

ಮತ್ತೆ ದೇವೆಂದ್ರಗೆ ಪಾರಿಜಾತವನಿತ್ತ
ಚಿತ್ತವ ಸೆಳೆವಪ್ಸರಸ್ತ್ರೀಯರ
ಹತ್ತುಸಾವಿರ ಕೊಟ್ಟ ವರುಣದೇವ ಹರಿ-
ಭಕ್ತಿಯ ಮನದಲ್ಲಿ ಬೆಳೆಸೆಂದ ||೧೦೪||

ಪೊಳೆವ ನವರತ್ನದ ರಾಶಿಯ ತೆಗೆತೆಗೆದು
ಉಳಿದ ಅಮರರಿಗೆ ಸಲ್ಲಿಸಿದ
ಉಳಿದ ಅಮರರಿಗೆ ಸಲ್ಲಿಸಿದ ಸಮುದ್ರ
ಕಳುಹಿದನವರ ಮನೆಗಳಿಗೆ ||೧೦೫||

ಉನ್ನತ ನವರತ್ನಮಯವಾದ ಅರಮನೆಯ
ಚೆನ್ನೆ ಮಗಳಿಗೆ ವಿರಚಿಸಿ
ತನ್ನ ಅಳಿಯನಿಗೆ ಸ್ಥಿರಮಾಡಿ ಕೊಟ್ಟ
ಇನ್ನೊಂದು ಕಡೆಯಡಿ ಇಡದಂತೆ ||೧೦೬||

ಹಯವದನ ತನ್ನ ಪ್ರಿಯಳಾದ ಲಕ್ಷುಮಿಗೆ
ಜಯವಿತ್ತ ಕ್ಷೀರಾಂಬುಧಿಯಲ್ಲಿ
ಜಯವಿತ್ತ ಕ್ಷೀರಾಂಬುಧಿಯಲ್ಲಿ ಶ್ರೀಕೃಷ್ಣ
ದಯದಿ ನಮ್ಮೆಲ್ಲರ ಸಲಹಲಿ ||೧೦೭||

ಈ ಪದವ ಮಾಡಿದ ವಾದಿರಾಜ ಮುನಿಗೆ
ಶ್ರೀಪತಿಯಾದ ಹಯವದನ
ತಾಪವ ಕಳೆದು ತನ್ನ ಶ್ರೀಚರಣವ ಸ
ಮೀಪದಲ್ಲಿಟ್ಟು ಸಲಹಲಿ ||೧೦೮||

ಇಂತು ಸ್ವಪ್ನದಲ್ಲಿ ಕೊಂಡಾಡಿಸಿಕೊಂಡ ಲಕ್ಷ್ಮೀ
ಕಾಂತನ ಕಂದನೆನಿಸುವ
ಸಂತರ ಮೆಚ್ಚಿನ ವಾದಿರಾಜೇಂದ್ರಮುನಿ
ಪಂಥದಿ ಪೇಳಿದ ಪದವಿದು ||೧೦೯||

ಶ್ರೀಯರಸ ಹಯವದನಪ್ರಿಯ ವಾದಿರಾಜ-
ರಾಯ ರಚಿಸಿದ ಪದವಿದು
ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚಾಗುವದು ನಿ-
ರಾಯಾಸದಿಂದ ಸುಖಿಪರು ||೧೧೦||

ಬೊಮ್ಮನ ದಿನದಲ್ಲಿ ಒಮ್ಮೊಮ್ಮೆ ಈ ಮದುವೆ
ಕ್ರಮ್ಮದಿ ಮಾಡಿ ವಿನೊದಿಸುವ
ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗು
ಅಸುರ ಮೋಹನವೆ ನರನಟನೆ ||೧೧೧||

ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ
ಮದುಮಕ್ಕಳಿಗೆ ಮುದವಹುದು
ವಧುಗಳಿಗೆ ಓಲೆ ಭಾಗ್ಯ ದಿನದಿನಕೆ ಹೆಚ್ಚುವದು
ಮದನನಯ್ಯನ ಕೃಪೆಯಿಂದ ||೧೧೨||

ಶೋಭಾನವೆನ್ನಿರೆ ಸುರರೊಳು ಶುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ ||ಶೋಭಾನೆ||

ಇತರೆ ವಿಷಯಗಳು :

ಲಲಿತಾ ಸಹಸ್ರನಾಮ ಕನ್ನಡ lyrics

ಶ್ರೀ ದೇವೀ ಖಡ್ಗಮಾಲಾ ಸ್ತೋತ್ರಂ

LEAVE A REPLY

Please enter your comment!
Please enter your name here